ಎಸ್ಡಿಪಿಐ ಪಕ್ಷದ ಶಿಸ್ತು, ತತ್ವ ಹಾಗೂ ಕಾರ್ಯವೈಖರಿಯೇ ಪಕ್ಷದ ಬೆಳವಣಿಗೆಗೆ ಕಾರಣ: ಅಲ್ಫೋನ್ಸ್ ಫ್ರಾಂಕೋ
ಬೆಳ್ತಂಗಡಿ (ಜೂನ್ 21): ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪಕ್ಷದ 18ನೇ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ಕುವೆಟ್ಟು ಬ್ಲಾಕ್ ಸಮಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ, ನೂತನ ಬ್ಲಾಕ್ ಕಚೇರಿ ಉದ್ಘಾಟನೆ, ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರ ಭಾನುವಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಟ್ಟು ಬ್ಲಾಕ್ ಅಧ್ಯಕ್ಷ ಹಂಝರಾಲಿ ವಹಿಸಿದ್ದರು. ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ ಸ್ವಾಗತಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು, “ದಮನಕಾರಿ ಆಡಳಿತ ಹಾಗೂ ಬೆದರಿಕೆಗಳಿಗೆ ಬಗ್ಗುವ ಪಕ್ಷ ಎಸ್ಡಿಪಿಐ ಅಲ್ಲ. ದೇಶದ ಸಂವಿಧಾನದ ಆಶಯಗಳು ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಬದ್ಧವಾಗಿ ಎಸ್ಡಿಪಿಐ ರಾಷ್ಟ್ರವ್ಯಾಪಿಯಾಗಿ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲಿದೆ” ಎಂದು ಹೇಳಿದರು.
ಕೇಂದ್ರ ಸರ್ಕಾರದ ಅಧೀನದಲ್ಲಿರುವ NIA, ED ಸೇರಿದಂತೆ ವಿವಿಧ ತನಿಖಾ ಸಂಸ್ಥೆಗಳು ಎಸ್ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಿ ಮುಟ್ಟುಗೋಲು ಹಾಕಿದ ಸಂದರ್ಭಗಳಿದ್ದರೂ, ಅದೇ ಪ್ರದೇಶಗಳಲ್ಲಿ ಪಕ್ಷದ ಕಚೇರಿಗಳು ಪುನಃ ಆರಂಭಗೊಂಡು ಹಿಂದಿಗಿಂತಲೂ ಹೆಚ್ಚು ಜನಪರ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿರುವುದು ಪಕ್ಷದ ಶಕ್ತಿ ಹಾಗೂ ಕಾರ್ಯಕರ್ತರ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ತಿಳಿಸಿದರು. ಮುಂದಿನ ದಿನಗಳಲ್ಲಿ ಜೂನ್ 21 ಅನ್ನು ದಲಿತರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು ಹಾಗೂ ಶೋಷಿತ ಸಮುದಾಯಗಳು ಸ್ವಾಭಿಮಾನ ದಿನವಾಗಿ ಸಂಭ್ರಮದಿಂದ ಆಚರಿಸುವ ದಿನಗಳು ಬರಲಿವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.
ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಅಲ್ಫೋನ್ಸ್ ಫ್ರಾಂಕೋ ಮಾತನಾಡಿ, “ಪಕ್ಷದ ಆರಂಭಿಕ ದಿನಗಳಿಂದಲೇ ನಾನು ಎಸ್ಡಿಪಿಐ ಸದಸ್ಯನಾಗಿದ್ದೇನೆ. ಪಕ್ಷವನ್ನು ದೂರದಿಂದ ನೋಡಿ ಅಭಿಪ್ರಾಯ ವ್ಯಕ್ತಪಡಿಸುವುದಕ್ಕಿಂತ ಅದರೊಳಗೆ ನಿಂತು ಅರಿತಾಗ ಮಾತ್ರ ಅದರ ಶಿಸ್ತು, ತತ್ವ ಹಾಗೂ ಕಾರ್ಯವೈಖರಿಯನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಇಂದು ಕುವೆಟ್ಟು ಎಂಬ ಸಣ್ಣ ಗ್ರಾಮದಿಂದ ಬೆಳೆದು ಪಕ್ಷದ ರಾಷ್ಟ್ರೀಯ ನಾಯಕತ್ವದ ಜವಾಬ್ದಾರಿ ವಹಿಸಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದರು.

ಎಸ್ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು ಮಾತನಾಡಿ, “ಎಸ್ಡಿಪಿಐ ಕೇವಲ ಒಂದು ರಾಜಕೀಯ ಪಕ್ಷವಲ್ಲ, ಅದು ಒಂದು ಜನಾಂದೋಲನವಾಗಿದೆ. ಪಕ್ಷದ ಕಚೇರಿಗಳು ಕೇವಲ ರಾಜಕೀಯ ಚಟುವಟಿಕೆಗಳಿಗೆ ಸೀಮಿತವಾಗಿಲ್ಲ. ಕೊರೊನಾ ಮಹಾಮಾರಿ ಹಾಗೂ ಪ್ರಾಕೃತಿಕ ವಿಕೋಪಗಳಂತಹ ಸಂಕಷ್ಟದ ಸಂದರ್ಭಗಳಲ್ಲಿ ಅವು ಜನರಿಗೆ ಸಾಂತ್ವನ ಮತ್ತು ನೆರವಿನ ಕೇಂದ್ರಗಳಾಗಿ ಕಾರ್ಯನಿರ್ವಹಿಸಿವೆ” ಎಂದು ಹೇಳಿದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಹಾಗೂ ಎಕ್ಸೆಲ್ ಸಂಸ್ಥೆಯ ಉಪನ್ಯಾಸಕ ಚಂದ್ರಪ್ಪ ಅವರು ಮಾತನಾಡಿದರು.

ವೇದಿಕೆಯಲ್ಲಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಶಾಕಿರ್ ಅಲೆಕೆಮಜಲ್, ಜಿಲ್ಲಾ ಸಮಿತಿ ಸದಸ್ಯರಾದ ಅಬೂಬಕ್ಕರ್ ಮದ್ವ, ಅಡ್ವೋಕೇಟ್ ಕಬೀರ್, ಹನೀಫ್ ಪುಂಜಾಲಕಟ್ಟೆ, ರಹಮಾನ್ ನಾವೂರು,ಬಂಟ್ವಾಳ ಕ್ಷೇತ್ರ ಅಧ್ಯಕ್ಷರಾದ ಸಾಹುಲ್ ಎಸ್ ಎಚ್, ಹಿರಿಯ ಮುಖಂಡರಾದ ಅಬ್ಬಾಸ್ ಹಾಜಿ ಸುನ್ನತ್ ಕೆರೆ ಹಾಗೂ ಉದ್ಯಮಿ ಹಮೀದ್ ಹಾಜಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರೋಗಿಗಳ ನೆರವಿಗಾಗಿ ಆಕ್ಸಿಜನ್ ಸಿಲಿಂಡರ್, ಸರ್ಜಿಕಲ್ ಬೆಡ್ ಹಾಗೂ ವೀಲ್ಚೇರ್ಗಳನ್ನು ಲೋಕಾರ್ಪಣೆಗೊಳಿಸಲಾಯಿತು. ರಕ್ತದಾನ ಶಿಬಿರದಲ್ಲಿ ಒಟ್ಟು 70 ಯೂನಿಟ್ ರಕ್ತ ಸಂಗ್ರಹವಾಗಿದ್ದು, ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಬೆಳ್ತಂಗಡಿ ಕ್ಷೇತ್ರ ನಾಯಕರು, ಕಾರ್ಯಕರ್ತರು, ಊರಿನ ನಾಗರಿಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




m
