Featured, ಅಂಕಣ, ಸ್ಥಳೀಯ

ಪುತ್ತೂರಿನಲ್ಲಿ ಡಿಸೆಂಬರ್ 25ರಂದು ವಿದ್ಯಾರ್ಥಿಗಳ ಉತ್ತಮ ಭವಿಷ್ಯ ನಿರ್ಮಾಣಕ್ಕೆ ಮಾರ್ಗದರ್ಶನ ನೀಡುವ ಕ್ಯಾಂಪಸ್ ಅಸೆಂಬ್ಲಿ

ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವ ಉದ್ದೇಶದಿಂದ ಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲೆ ವತಿಯಿಂದ ಭವ್ಯ ಕ್ಯಾಂಪಸ್ ಅಸೆಂಬ್ಲಿ ಕಾರ್ಯಕ್ರಮ ಡಿಸೆಂಬರ್ 25, ಗುರುವಾರ, ಪುತ್ತೂರಿನ ಅಬ್ರೋಡ್ ಆಡಿಟೋರಿಯಂನಲ್ಲಿ ಜರುಗಲಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ನಡೆಯುವ ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಅದಕ್ಕಿಂತ ಮೇಲಿನ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಲು ಅವಕಾಶವಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ಗುರಿಯಾಗಿಟ್ಟುಕೊಂಡು ಕರಿಯರ್ ಗೈಡೆನ್ಸ್, ವ್ಯಕ್ತಿತ್ವ ವಿಕಸನ, ನಾಯಕತ್ವ ಕೌಶಲ್ಯ, ಕ್ಯಾಂಪಸ್ ಜೀವನದ ಅವಕಾಶಗಳು ಮುಂತಾದ ವಿಷಯಗಳ ಬಗ್ಗೆ ವಿವಿಧ ಕ್ಷೇತ್ರಗಳಲ್ಲಿ ಪಳಗಿದ ತಜ್ಞರು ವಿವಿಧ ಸೆಷನ್‌ಗಳನ್ನು ನಡೆಸಲಿದ್ದಾರೆ. ಮೋಜು–ಮನರಂಜನೆಗೂ ತಕ್ಕ ಮಟ್ಟಿನ ಮಹತ್ವ ನೀಡಲಾಗಿದ್ದು, ವಿಭಿನ್ನ ಮೋಜು ಕ್ರೀಡೆಗಳು, ತಂಡಾಧಾರಿತ ಚಟುವಟಿಕೆಗಳು, ಸೃಜನಾತ್ಮಕ ಸ್ಪರ್ಧೆಗಳು, ವಿದ್ಯಾರ್ಥಿಗಳ ಸೌಹಾರ್ದ ಹಾಗೂ ತಂಡಭಾವನೆಯನ್ನು ಗಟ್ಟಿಗೊಳಿಸಲಿವೆ. ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಸಂವಹನ ಸಾಮರ್ಥ್ಯ, ನಾಯಕತ್ವ ಗುಣಗಳನ್ನು ಬೆಳೆಸುವ ಜೊತೆಗೆ ಕ್ಯಾಂಪಸ್ ಮಟ್ಟದಲ್ಲಿ ಒಗ್ಗಟ್ಟಿನ ವಾತಾವರಣ ನಿರ್ಮಿಸುವುದು ಆಯೋಜಕರ ಮುಖ್ಯ ಧ್ಯೇಯವಾಗಿದೆ. ನೋಂದಣಿ ಪ್ರಕ್ರಿಯೆ ಸುಲಭಗೊಳಿಸಲು ಆಮಂತ್ರಣ ಪೋಸ್ಟರ್‌ನಲ್ಲಿ ವಿಶೇಷ QR ಕೋಡ್ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳು ಮೊಬೈಲ್ ಮೂಲಕವೇ ತಕ್ಷಣ ರಿಜಿಸ್ಟ್ರೇಶನ್ ಮಾಡಿಕೊಳ್ಳಬಹುದಾಗಿದೆ. ಬೆಳಗ್ಗೆಯಿಂದ ವಿವಿಧ ಪ್ರೇರಣಾದಾಯಕ ತರಗತಿಗಳು, ನಂತರ ವಿಭಿನ್ನ ಕಾರ್ಯಾಗಾರಗಳು, ನಂತರ ಮನರಂಜನಾ ಸ್ಪರ್ಧೆಗಳು, ಬಹುಮಾನ ವಿತರಣೆ, ಸಮೂಹ ಚರ್ಚೆಗಳ ಮೂಲಕ ಕ್ಯಾಂಪಸ್ ಅಸೆಂಬ್ಲಿ ಸಂಭ್ರಮಾತ್ಮಕ ಅಂತ್ಯಗೊಳ್ಳಲಿದೆ. “Connect – Celebrate – Create” ಎಂಬ ಧ್ಯೇಯವಾಕ್ಯವನ್ನು ಹೊತ್ತು ಬರುವ ಈ ಕ್ಯಾಂಪಸ್ ಅಸೆಂಬ್ಲಿ, ಜಿಲ್ಲೆಯ ವಿದ್ಯಾರ್ಥಿಗಳಿಗೆ ನೆನಪಿನಲ್ಲಿ ಉಳಿಯುವ ವಿಶೇಷ ಜ್ಞಾನ–ಆನಂದ ಸಂಭ್ರಮವಾಗಲಿದೆ ಎಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಇಂಜಿನಿಯರ್ ಶಫೀಕ್ ಸಅದಿ ತಿಳಿಸಿದ್ದಾರೆ.

Related Posts