“ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ” ವತಿಯಿಂದ ಸುದ್ದಿಗೋಷ್ಠಿ
ಕಾಸರಗೋಡು, ಜ.16:
ಗಡಿನಾಡು ಕಾಸರಗೋಡಿನಲ್ಲಿ ದಶಕಗಳಿಂದ ಕನ್ನಡ ಭಾಷೆ ಹಾಗೂ ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಂಡು ಬರುತ್ತಿರುವ ಕನ್ನಡ ಶಾಲೆಗಳ ಮೇಲೆ ವ್ಯವಸ್ಥಿತವಾಗಿ ಮಲಯಾಳಂ ಭಾಷೆಯನ್ನು ಹೇರಲಾಗುತ್ತಿದೆ ಎಂಬ ಆರೋಪದೊಂದಿಗೆ, “ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ”ದ ವತಿಯಿಂದ ಇಂದು ಕಾಸರಗೋಡಿನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅಭಿಯಾನದ ಪ್ರಮುಖರು, ಆಡಳಿತಾತ್ಮಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಕನ್ನಡವನ್ನು ನಿರ್ಲಕ್ಷಿಸಿ ಮಲಯಾಳಂ ಭಾಷೆಯ ಆದೇಶಗಳು ಮತ್ತು ಹೇಳಿಕೆಗಳನ್ನು ಕಡ್ಡಾಯಗೊಳಿಸಲಾಗುತ್ತಿರುವುದು ಸಂವಿಧಾನಾತ್ಮಕವಾಗಿ ಭಾಷಾ ಅಲ್ಪಸಂಖ್ಯಾತರಿಗೆ ನೀಡಿರುವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತೀವ್ರವಾಗಿ ಖಂಡಿಸಿದರು. ಕನ್ನಡಿಗರ ಭಾಷಾ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಯಾನದ ಸಂಸ್ಥಾಪಕರಾದ ಉನ್ಯೆಸ್ ಪೆರಾಜೆ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ರಾಜಶೇಖರ್ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ದಿವಾಕರ್ ಆಚಾರ್ಯ, ಉಮ್ಮರ್ ಫಾರೂಕ್ ಟೆಕ್ನಿಕ್, ಪ್ರಧಾನ ಕಾರ್ಯದರ್ಶಿ ನೌಫಲ್ ಕೆ.ಬಿ.ಎಸ್. ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡು ಅಭಿಯಾನಕ್ಕೆ ಬೆಂಬಲ ಸೂಚಿಸಿದರು

