ಸುಬ್ರಹ್ಮಣ್ಯ/ಏನೆಕಲ್ಲು, ಜು. 11: ಬಸ್ಗೆ ಹತ್ತಲು ಓಡಿ ಬಂದ ವೇಳೆ ಆಯತಪ್ಪಿ ಬಸ್ಗೆ ಡಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡ ಏನೆಕಲ್ಲು ಗ್ರಾಮದ ಮುತ್ತಾಜೆಯ ನಿವಾಸಿ ಚೆನ್ನಪ್ಪ ಗೌಡ ಅವರು ಮೃತಪಟ್ಟ ದಾರುಣ ಘಟನೆ ಶನಿವಾರ ಮಧ್ಯಾಹ್ನ ಏನೆಕಲ್ಲು ಬಸ್ ನಿಲ್ದಾಣದ ಬಳಿ ನಡೆದಿದೆ.
ಮಾಹಿತಿಯ ಪ್ರಕಾರ, ಚೆನ್ನಪ್ಪ ಗೌಡ ಅವರು ಪಂಜಕ್ಕೆ ತೆರಳಲು ಏನೆಕಲ್ಲು ಬಸ್ ನಿಲ್ದಾಣದ ಒಂದು ಬದಿಯಲ್ಲಿ ನಿಂತಿದ್ದರು. ಈ ವೇಳೆ ಸುಬ್ರಹ್ಮಣ್ಯದಿಂದ ಪುತ್ತೂರಿನತ್ತ ಸಂಚರಿಸುತ್ತಿದ್ದ ಬಸ್ ಬಂದಿದ್ದು, ಅದನ್ನು ಹತ್ತುವ ಉದ್ದೇಶದಿಂದ ಬಸ್ ನಿಲ್ದಾಣದತ್ತ ಓಡಿ ಬಂದಾಗ ಆಯತಪ್ಪಿ ಬಸ್ಗೆ ಡಿಕ್ಕಿ ಹೊಡೆದಿದ್ದಾರೆ.
ಡಿಕ್ಕಿಯ ತೀವ್ರತೆಗೆ ಅವರು ರಸ್ತೆಯ ಮಧ್ಯಭಾಗಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡರು. ಅಪಘಾತದ ಬಳಿಕ ಬಸ್ ರಸ್ತೆ ಬದಿಗೆ ಸರಿದಿದೆ ಎಂದು ತಿಳಿದುಬಂದಿದೆ.
ಸ್ಥಳೀಯರು ತಕ್ಷಣವೇ ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಸುಬ್ರಹ್ಮಣ್ಯ ಆಸ್ಪತ್ರೆಗೆ ಸಾಗಿಸಿದರು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಕಡಬ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯ ಕುರಿತು ಸಂಬಂಧಿತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




m

