ಪುತ್ತೂರು: ನೂರಾನಿ ಫ್ಯಾಮಿಲಿ ಟ್ರಸ್ಟ್, ಬೆಟ್ಟಂಪಾಡಿ ಇದರ ಒಂಬತ್ತನೇ ವಾರ್ಷಿಕ ಕುಟುಂಬ ಸಂಗಮವು ಇತ್ತೀಚೆಗೆ ಬೆಟ್ಟಂಪಾಡಿ ಅರ ಹೌಸ್ನ “ತೊಟ್ಟಿ ಮಾಹಿನ್ ಉಸ್ತಾದ್ ವೇದಿಕೆ”ಯಲ್ಲಿ ಭವ್ಯವಾಗಿ ನಡೆಯಿತು.

ಟ್ರಸ್ಟ್ ಅಧ್ಯಕ್ಷ ಮೂಸಲ್ ಮದನಿ ಕಕ್ಕೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಬೂಬಕರ್ ಸಅದಿ ಕುಕ್ಕಾಜೆ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ನಸೀಹ್ ದಾರಿಮಿ ಚೆಂಗಳ, ಇಸ್ಮಾಯಿಲ್ ಸಅದಿ ಅಂಕತ್ತಳ ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಕುಟುಂಬದ ಪ್ರಮುಖರಾದ ಅಬ್ದುಲ್ ಖಾದರ್ ಹಾಜಿ ಅಂಕತ್ತಳ, ಮುಹಮ್ಮದ್ ಪಳ್ಳಿತ್ತರು, ಮುಹಮ್ಮದ್ ಕುಂಞಿ ಅಂಕತ್ತಳ, ಶರೀಫ್ ನಿಡ್ಪಳ್ಳಿ, ಫಾರೂಕ್ ಕೊಡಾಜೆ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ಮುಂದಿನ ಹತ್ತನೇ ವಾರ್ಷಿಕ ಕುಟುಂಬ ಸಂಗಮದ ದಿನಾಂಕವನ್ನು ಘೋಷಿಸಿ, ಅದರ ಲೋಗೋವನ್ನು ಬಿಡುಗಡೆ ಮಾಡಲಾಯಿತು. ಜೊತೆಗೆ ಕುಟುಂಬದ ಹಿರಿಯರಾದ ಆಲಿ ಕುಂಞಿಪಟ್ಟೆ ಹಾಗೂ ಕಳೆದ ಬಾರಿ ಮದ್ರಸ ಹತ್ತನೇ ತರಗತಿಯ ಸಾರ್ವಜನಿಕ ಪರೀಕ್ಷೆಯಲ್ಲಿ ಎಲ್ಲಾ ವಿಷಯಗಳಲ್ಲೂ ಶೇ.100 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಗೈದ ಮುಹಮ್ಮದ್ ರಾಶಿದ್ ಬೆಳಂದೂರು ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುಟುಂಬದ ಪುಟಾಣಿಗಳಿಂದ ಹಾಡು, ಭಾಷಣ, ಬುರ್ದಾ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ನೂರಾನಿ ಫ್ಯಾಮಿಲಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ನೂರಾನಿ ಸ್ವಾಗತಿಸಿ, ವಂದಿಸಿದರು.


